ಕರ್ನಲ್ ಅಶುತೋಷ್ ಶರ್ಮಾ ಅವರು ಎಸ್‌ಎಂ ಮತ್ತು ಎರಡು ಬಾರ್‌ ಎಂಬ ಸೇನಾ ಪದಕಗಳನ್ನು ಪಡೆದ ಭಾರತೀಯ ಸೇನಾಧಿಕಾರಿ. ಅವರು 21 ನೇ ಬೆಟಾಲಿಯನ್ ರಾಷ್ಟ್ರೀಯ ರೈಫಲ್ಸ್ನ ಕಮಾಂಡಿಂಗ್ ಅಧಿಕಾರಿಯಾಗಿದ್ದರು. ಮೇ ೨, ೨೦೨೦ ರಂದು, ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂಡ್ವಾರದಲ್ಲಿ ನಡೆದ ಮುಖಾಮುಖಿಯಲ್ಲಿ ಅವರು ಹುತಾತ್ಮರಾದರು. ಅವರಿಗೆ ಮೂರು ಬಾರಿ ಶೌರ್ಯಕ್ಕಾಗಿ ಸೇನಾ ಪದಕ ನೀಡಲಾಗಿತ್ತು. ಅವರ ಸಾವಿಗೆ ಕೆಲವು ತಿಂಗಳ ಮೊದಲು ಸೇನಾ ಬಾರ್ ಮತ್ತು ಮರಣೋತ್ತರವಾಗಿ ಎರಡನೇ ಬಾರ್ ಸೇನಾಪದಕ ನೀಡಲಾಗಿತ್ತು. == ಆರಂಭಿಕ ಜೀವನ ಮತ್ತು ಶಿಕ್ಷಣ == ಶರ್ಮಾ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಮಣ್ಣು ಸಂರಕ್ಷಣಾ ಅಧಿಕಾರಿ ಶಂಭು ದತ್ ಪಾಠಕ್ ಮತ್ತು ಸುಧಾ ಶರ್ಮಾ ದಂಪತಿಗೆ ಜನಿಸಿದರು. ಈ ಕುಟುಂಬವು ಬುಲಂದ್‌ಶಹರ್‌ನ ಔರಂಗಾಬಾದ್ ಪ್ರದೇಶದ ಪರ್ವಾನಾ ಮಹ್ಮೋದ್‌ಪುರ ಹಳ್ಳಿಯಿಂದ ಬಂದವರು. ಅವರು ತಮ್ಮ ಶಾಲಾ ಶಿಕ್ಷಣ ಮತ್ತು ಪದವಿಗಳನ್ನು ಬುಲಂದ್‌ಶಹರ್‌ನಲ್ಲಿ ಮುಗಿಸಿದರು ಮತ್ತು ಡಿಎವಿ ಇಂಟರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಶರ್ಮಾ ಚಿಕ್ಕ ವಯಸ್ಸಿನಿಂದಲೇ ಭಾರತೀಯ ಸೇನೆಗೆ ಸೇರಲು ಬಯಸಿದ್ದರು ಮತ್ತು ಆರು ವರ್ಷಗಳ ಕಾಲ ಸೇರಲು ಪ್ರಯತ್ನಿಸಿದರು. ಅವರು ತಮ್ಮ ಹದಿಮೂರನೆಯ ಪ್ರಯತ್ನದಲ್ಲಿ ಯಶಸ್ವಿಯಾದರು ಮತ್ತು ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (), ಚೆನ್ನೈಗೆ ಸೇರಿದರು. ಒಟಿಎಯಲ್ಲಿ, ಅವರು ಹಾಕಿ ತಂಡದ ಭಾಗವಾಗಿದ್ದರು ಮತ್ತು ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ನಡೆದ ಇಂಟರ್ ಅಕಾಡೆಮಿ ಕ್ರೀಡಾಕೂಟದಲ್ಲಿ ಅಕಾಡೆಮಿಯನ್ನು ಪ್ರತಿನಿಧಿಸಿದರು. == ಮಿಲಿಟರಿ ವೃತ್ತಿ == ಶರ್ಮಾ ಚೆನ್ನೈನ ಒಟಿಎ (ಎಸ್‌ಎಸ್‌ಸಿ - 72) ಯಿಂದ ಪದವಿ ಪಡೆದರು, ಮತ್ತು ೧೯ ನೇ ಬೆಟಾಲಿಯನ್, ಬ್ರಿಗೇಡ್ ಆಫ್ ದಿ ಗಾರ್ಡ್ಸ್‌ಗೆ ಸೆಪ್ಟೆಂಬರ್ ೧, ೨೦೦೧ ರಂದು ಕಮೀಶನ್ ಆದರು. ಸೈನ್ಯದಲ್ಲಿ ಅವರ ಎರಡು ದಶಕಗಳ ಸೇವೆಯಲ್ಲಿ, ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಬಹು-ಯಶಸ್ವಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯ ಭಾಗವಾಗಿದ್ದರು. ಶರ್ಮಾ ಅವರಿಗೆ ೨೬ ಜನವರಿ ೨೦೧೮ ರಂದು ಶೌರ್ಯಕ್ಕಾಗಿ ಸೇನಾ ಪದಕವನ್ನು ನೀಡಲಾಯಿತು. ೨೦೧೯ ರಲ್ಲಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರ ಮೇಲೆ ಗ್ರೆನೇಡ್‌ನೊಂದಿಗೆ ಧಾವಿಸುತ್ತಿದ್ದ ಒಬ್ಬ ಭಯೋತ್ಪಾದಕನನ್ನು ಅವರು ಹತ್ತಿರದಿಂದ ಗುಂಡು ಹಾರಿಸಿ ನಿಷ್ಕ್ರಿಯಗೊಳಿಸಿದರು. ಈ ಸಾಹಸಕ್ಕಾಗಿ, ೧೫ ಆಗಸ್ಟ್ ೨೦೧೯ ರಂದು, ೨೧ ನೇ ಬೆಟಾಲಿಯನ್, ರಾಷ್ಟ್ರೀಯ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ, ಅವರಿಗೆ ಸೇನಾ ಪದಕಕ್ಕೆ ಬಾರ್ ನೀಡಲಾಯಿತು. ೨ ಮೇ ೨೦೨೦ ರಂದು, ಹಂದ್ವಾರ ಸಮೀಪದ ಚಂಗಿಮುಲ್ಲಾ ಹಳ್ಳಿಯ ಮನೆಯೊಳಗೆ ಭಯೋತ್ಪಾದಕರ ಇರುವಿಕೆಯನ್ನು ಸೂಚಿಸುವ ಗುಪ್ತಚರ ವರದಿಗಳು ಬಂದವು. ನಾಗರಿಕರನ್ನು ಒತ್ತೆಯಾಳುಗಳಾಗಿ ಇರಿಸಲಾಗಿತ್ತು. ಶರ್ಮಾ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದರು. ನಾಗರಿಕರನ್ನು ರಕ್ಷಿಸಲಾಯಿತು ಮತ್ತು ತಂಡದ ಮೇಲೆ ಭಾರೀ ಗುಂಡಿನ ಧಾಳಿ ನಡೆಯಿತು. ತಂಡದೊಂದಿಗಿನ ಸಂವಹನ ಸಂಪರ್ಕ ಕಳೆದುಹೋಗಿತ್ತು. ೧೮ ಗಂಟೆಗಳ ಕಾರ್ಯಾಚರಣೆಯ ನಂತರ, ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಯಿತು. ಶರ್ಮಾ ಅವರ ಸಹಿತ, ಇತರೆ ನಾಲ್ಕು ಭಾರತೀಯ ಭದ್ರತಾ ಪಡೆಯ ಸೈನಿಕರು ಗುಂಡಿನ ಚಕಮಕಿಯಲ್ಲಿ ಹತರಾದರು. ಕಳೆದ ಐದು ವರ್ಷಗಳಲ್ಲಿ ಗುಂಡಿನ ಚಕಮಕಿಯಲ್ಲಿ ಪ್ರಾಣ ಕಳೆದುಕೊಂಡ ಮೊದಲ ಕಮಾಂಡಿಂಗ್ ಅಧಿಕಾರಿ ಶರ್ಮಾ ಅವರು. == ಗೌರವಗಳು ಮತ್ತು ಪರಂಪರೆ == ಶರ್ಮಾ ಅವರನ್ನು ೫ ಮೇ ೨೦೨೦ ರಂದು ಜೈಪುರದಲ್ಲಿ ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ ನೈಋತ್ಯ ಕಮಾಂಡ್‍ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಅಲೋಕ್ ಸಿಂಗ್ ಕ್ಲೆರ್ ಅವರುಗಳು ಶರ್ಮರಿಗೆ ಗೌರವ ಸಲ್ಲಿಸಿದರು ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಂಸತ್ ಸದಸ್ಯ ರಾಜ್ಯವರ್ಧನ್ ಸಿಂಗ್ ರಾಥೋಡ್, ಪ್ರತಾಪಸಿಂಹ ಖಚರಿಯಾವಾಸ್, ರಾಜಸ್ಥಾನದ ಮಾಜಿ ಸೈನಿಕರ ಕಲ್ಯಾಣ ಸಚಿವರು, ಪೊಲೀಸ್ ಆಯುಕ್ತರು ಮತ್ತು ಜೈಪುರದ ಜಿಲ್ಲಾಧಿಕಾರಿಯವರೂ ಹಾಜರಿದ್ದರು. ೨೦೨೧ ರ ಗಣರಾಜ್ಯೋತ್ಸವ ಗೌರವಾನ್ವಿತರ ಪಟ್ಟಿಯಲ್ಲಿ, ಶರ್ಮಾ ಅವರನ್ನು ಮರಣೋತ್ತರವಾಗಿ ಎರಡನೇ ಬಾರ್ ಸೇನಾ ಪದಕ ನೀಡಿ ಅಲಂಕರಿಸಲಾಯಿತು. == ವೈಯಕ್ತಿಕ ಜೀವನ == ಶರ್ಮಾ ಪಲ್ಲವಿ ಶರ್ಮಾಳನ್ನು ವಿವಾಹವಾಗಿದ್ದರು ಮತ್ತು ಶರ್ಮಾ ದಂಪತಿಗೆ ತಮನ್ನಾ ಎಂಬ ಮಗಳು ಇದ್ದಾಳೆ. == ಉಲ್ಲೇಖಗಳು ==